News: ಶ್ರೀಭಾರತಿ ಕಾಲೇಜಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಪ್ರಾಂಶುಪಾಲ ಶ್ರೀ ಸಂದೀಪ್ ಆಚಾರ್ಯ ಅವರ ನಿರ್ದೇಶನದಂತೆ ಸೆಪ್ಟೆಂಬರ್ 4ರಂದು ಇಡೀ ದಿನ ಹಬ್ಬದ ಸಂಭ್ರಮ.
ಬೆಳಗ್ಗೆ ಶ್ರೀಕೃಷ್ಣ ಜನ್ಮಾಷ್ಟಮಿ. ಕನ್ನಡ ಶಿಕ್ಷಕರಾದ ಶ್ರೀಮತಿ ಗಾಯತ್ರೀ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಶಂಕರಶ್ರೀ ಸಭಾಭವನದಲ್ಲಿ ಭಜನೆ, ಪೂಜೆ, ಮಂಗಳಾರತಿ ನೆರವೇರಿಸುವುದರ ಮೂಲಕ ಶ್ರೀಕೃಷ್ಣನನ್ನು ಆರಾಧಿಸಲಾಯಿತು.
ಬಳಿಕ ಗೋಪಾಲಕ ಶ್ರೀಕೃಷ್ಣನಿಗೆ ಪ್ರಿಯವಾದ ಗೋಪೂಜೆ. ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಮಕ್ಕಳು ಗೋಆರತಿ ಎತ್ತಿ, ಗೋಗ್ರಾಸ ನೀಡಿ, ಆನಂದಿಸಿದರು. ಶ್ರೀ ಸತೀಶ ಶಾಸ್ತ್ರಿ ಅವರು ಗೋವುಗಳನ್ನು ಪರಿಚಯಿಸಿದರು.
ಆ ಬಳಿಕ ಓಣಂ ಹಬ್ಬದ ಅಂಗವಾಗಿ ಪೂಕಳಂ ರಚಿಸಿ, ನೃತ್ಯ ಮಾಡಿ, ಮಕ್ಕಳು ಸಂಭ್ರಮಿಸಿದರು. ಮಾವೇಲಿಯ ಪ್ರವೇಶ ಅತ್ಯುತ್ತಮವಾಗಿ ಮೂಡಿ ಬಂತು. ಪೂಕಳಂ ವಿನ್ಯಾಸ ಅದ್ಭುತವಾಗಿತ್ತು.
ಅಷ್ಟಮಿ ಅಂದ ಮೇಲೆ ಮೊಸರು ಕುಡಿಕೆ ಆಗಬೇಕಲ್ವಾ ? ವಿದ್ಯಾರ್ಥಿನಿಯರು ಕಣ್ಣಿಗೆ ಬಟ್ಟೆ ಕಟ್ಟಿ, ಹಗ್ಗದಲ್ಲಿ ಕಟ್ಟಿದ್ದ ಮಡಿಕೆಯನ್ನು ಒಡೆದು ಆನಂದಿಸಿದರು. ವಿದ್ಯಾರ್ಥಿಗಳು ಪಿರಮಿಡ್ ನಿರ್ಮಿಸಿ ಮಡಿಕೆಯನ್ನು ಒಡೆದರು.
ಆಮೇಲೆ ಶಿಕ್ಷಕರ ದಿನಾಚರಣೆ. ಬೋಧಶ್ರೀ ಸಭಾಭವನದಲ್ಲಿ ಶಿಕ್ಷಕರಿಗೆ ವಿವಿಧ ಸ್ಪರ್ಧೆ ಏರ್ಪಡಿಸಿದ ವಿದ್ಯಾರ್ಥಿಗಳು ತಾವೂ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯಗಳ ಮೂಲಕ ಶಿಕ್ಷಕರಿಗೆ ಗೌರವ ಸಲ್ಲಿಸಿದರು.
ಇಡೀ ದಿನ ಸಂಭ್ರಮದಲ್ಲಿ ಭಾಗಿಯಾಗಿ ಸಂತಸದಿಂದ ವಿದ್ಯಾರ್ಥಿಗಳು ಮತ್ತು ಬೋಧಕ ಬೋಧಕೇತರ ವೃಂದದವರು ಸಂಜೆ ಮನೆಕಡೆ ಹೆಜ್ಜೆ ಹಾಕಿದರು.
