UDUPI: 1842 ಮತದಾನ ಕೇಂದ್ರಗಳನ್ನು ಮತಯಂತ್ರದೊಂದಿಗೆ ಮತಗಟ್ಟೆ ತಲುಪಿದ ಸಿಬ್ಭಂದಿ

UDUPI: 1842 ಮತದಾನ ಕೇಂದ್ರಗಳನ್ನು ಮತಯಂತ್ರದೊಂದಿಗೆ ಮತಗಟ್ಟೆ ತಲುಪಿದ ಸಿಬ್ಭಂದಿ

 

 ಉಡುಪಿ ಜಿಲ್ಲೆಯ ಪ್ರತಿಯೊಂದು ಮತದಾನ ಕೇಂದ್ರದಲ್ಲಿ ಪ್ರತಿಕ್ಷಣದ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ಇಂದು ಸಂಜೆ ಎಲ್ಲಾ ಮತದಾನ ಕೇಂದ್ರಕ್ಕೆ ಅಧಿಕಾರಿಗಳು ಮತ್ತು  ಸಿಬ್ಬಂದಿಗಳು ಮತಯಂತ್ರ ಹಾಗೂ ಮತ್ತಿತರ ಪರಿಕರಗಳನ್ನು ಸುರಕ್ಷಿತವಾಗಿ ತಲುಪಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ತಿಳಿಸಿದರು.

  ಅವರು ತಮ್ಮ ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ಚುನಾವಣೆ ಕುರಿತ ಮಾಹಿತಿ ಸಂಗ್ರಹಣೆಗೆ ಸ್ಥಾಪಿಸಿರುವ ವಾರ್ ರೂಮ್ ನಲ್ಲಿ ಮಾಹಿತಿಗಳನ್ನು ಪಡೆದು ಮಾತನಾಡುತ್ತಿದ್ದರು.

  ಇಂದು  ಜಿಲ್ಲೆಯ ೮ ವಿಧಾನಸಭಾ ಕ್ಷೇತ್ರದ ೧೮೪೨ ಮತದಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಷ್ಟ್ರಿಂಗ್ ಸೆಂಟರ್‌ನಿಂದ ಮತಯಂತ್ರಗಳು, ಚುನಾವಣೆಗೆ ಅಗತ್ಯವಿರುವ ಪರಿಕರಗಳನ್ನು ಪಡೆದು ಸಂಜೆ ೪ಗಂಟೆಯ ಹೊತ್ತಿಗೆ ಶೇಕಾಡ ೯೦ ರಷ್ಟು ತಲುಪಿದ್ದರು, ಸಂಜೆ ೬.೫೦ ರ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಮತದಾನ ಕೇಂದ್ರಗಳನ್ನು ಸುರಕ್ಷಿವಾಗಿ ತಲುಪಿದ ಮಾಹಿತಿ ಪಡೆಯಲಾಗಿದೆ. ನಾಳೆ ಬೆಳಗ್ಗೆ ೭ ರಿಂದ ಸಂಜೆ ೬ ರ ವರೆಗೆ ಮತದಾನ ಮಾಡಲು ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಸಹ ಕೈಗೊಂಡಿದ್ದಾರೆ ಎಂದರು.

  ಉಡುಪಿ ಜಿಲ್ಲೆಯ ೪ ವಿಧಾನಸಭಾ ಕ್ಷೇತ್ರದ ೮೬೬ ಮತ ಕೇಂದ್ರಗಳಿಗೆ ಮತಗಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮತಯಂತ್ರಗಳನ್ನು ಕೊಂಡೊಯ್ಯಲು ೨೫೨ ಜಿ.ಪಿ.ಎಸ್ ಅಳವಡಿಸಿದ ಬಸ್ ಹಾಗೂ ಇತರೆ ಲಘು ವಾಹನಗಳನ್ನು ಬಳಸಲಾಗಿತ್ತು. ಈ ವಾಹನಗಳ ಜಿ.ಪಿ.ಎಸ್ ಟ್ರ್ಯಾಕಿಂಗ್ ಅನ್ನು ವಾರ್‌ರೂಮಿನಲ್ಲಿ ಮಾಹಿತಿ ಪಡೆಯಲಾಗಿದೆ ಎಂದರು.

 , ಮತದಾನ ಕೇಂದ್ರಗಳಲ್ಲಿ ಮತಯಂತ್ರಗಳ ನೂನ್ಯತೆ, ಮತದಾನ ಕೇಂದ್ರಗಳ ಬಳಿ ಕಾನೂನು ಸುವ್ಯವಸ್ಥೆ ತೊಂದರೆ ಉಂಟಾದಲ್ಲಿ  ಕ್ಷಣದಲ್ಲಿ ಮಾಹಿತಿ ಲಭ್ಯವಾಗುತ್ತಿರುವ ಹಿನ್ನಲೆ  ಅಗತ್ಯ ನೆರವನ್ನು ನೀಡಲು ಕ್ರಮ ವಹಿಸಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುವು ಮಾಡಕೊಡಲಾಗುವುದು ಎಂದರು. 

ಪ್ರತೀ ಮತದಾನ ಕೇಂದ್ರದಿಂದ ಎರಡು ಗಂಟೆಗಳಿಗೊಮ್ಮೆ ಶೇಕಡವಾರು ಮತದಾನ ಆಗಿರುವ ಬಗ್ಗೆ ಮಾಹಿತಿಯನ್ನು ಪಡೆಯಲಾಗುವುದು ಎಂದ ಅವರು ಪ್ರತೀ ಎರಡು ಗಂಟೆಗಳಿಗೊಮ್ಮೆ ಶೇಕಡವಾರು ಮತದಾನ ವಿವರವನ್ನು ಮಾಧ್ಯಮ ಪ್ರತಿನಿಧಿಗಳಿಗೆ ನೀಡಲು ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದರು.

 ಮತದಾನ ಕೇಂದ್ರಗಳ ವೆಬ್‌ಕಾಸ್ಟಿಂಗ್‌ನ ವೀಕ್ಷಿಸಲು, ವಾಹನಗಳ ಜಿ.ಪಿ.ಎಸ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ವೀಕ್ಷಿಸಲು, ಇ.ವಿ.ಎಂ ಗಳ ಸಮಸ್ಯೆ ಉಂಟಾದಲ್ಲಿ ಅವುಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಬೆಳಗ್ಗೆ ೫.೩೦ ರಿಂದ ಸಂಜೆ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾರ್ಯನಿರ್ವಹಿಸಲಿವೆ ಎಂದರು.

 ಜಿಲ್ಲೆಯಲ್ಲಿ ೮೬೬ ಮತದಾನ ಕೇಂದ್ರಗಳಿದ್ದು, ಅವುಗಳಲ್ಲಿ ೭೯೧ ಮತಗಟ್ಟೆ ಕೇಂದ್ರಗಳಿಗೆ ವೆಬ್‌ಕಾಸ್ಟಿಂಗ್ ಅಳವಡಿಸಿದ್ದು, ಈ ಮತಗಟ್ಟೆಗಳಲ್ಲಿ ನಡೆಯುವ ಪ್ರತಿಯೊಂದು ಕ್ಷಣವನ್ನು ನೇರವಾಗಿ ವಾರ್‌ರೂಮಿನಿಂದ ವೀಕ್ಷಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೈಗಾರಿಕಾ ಕೆಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾಧಿಕಾರಿ ಕಚೇರಿಯ ವಾರ್ ರೂಮ್ ಸಿಬ್ಬಂದಿಗಳು ಹಾಗೂ  ಮತ್ತಿತರರು ಉಪಸ್ಥಿತರಿದ್ದರು. 

ನೀತಿ ಸಂಹಿತೆ ಉಲ್ಲಂಘನೆ : ಮದ್ಯ, ಅಕ್ಕಿ ವಶ

 ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ ರ ಹಿನ್ನೆಲೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ವತಿಯಿಂದ ೯೨೫೧ ರೂ. ಮೌಲ್ಯದ ೧೮.೪೮೦ ಲೀ. ಮದ್ಯ, ಪೊಲೀಸ್ ಇಲಾಖೆಯ ವತಿಯಿಂದ ೭೪೮೦ ರೂ. ಮೌಲ್ಯದ ೧೬.೩೮೦ ಲೀ ಮದ್ಯ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಫ್.ಎಸ್ ತಂಡದಿಂದ ೫೧,೬೦೦ ರೂ. ಮೌಲ್ಯದ ೧,೦೩೨ ಕೆ.ಜಿ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಸಾಲಿಗ್ರಾಮ ಪ.ಪಂಚಾಯತ್ :ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ ಮತದಾನ ಕೇಂದ್ರಕ್ಕೆ ತೆರಳಲು ಉಚಿತ ವಾಹನ ವ್ಯವಸ್ಥೆ

ಉಡುಪಿ-ಚಿಕ್ಕಮಗಳೂರು ಸಾರ್ವತ್ರಿಕ ಲೋಕಸಭಾ ಚುನಾವಣೆ -೨೦೨೪ ಕ್ಕೆ ಸಂಬಂಧಿಸಿದಂತೆ ಏಪ್ರಿಲ್ ೨೬ ರಂದು ಮತದಾನ ನಡೆಯಲಿರುವ ಹಿನ್ನೆಲೆ, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಶೇ? ಚೇತನರು, ಅಶಕ್ತರು ಮತ್ತು ಹಿರಿಯ ನಾಗರೀಕರು (೭೫ ವ? ಮೇಲ್ಪಟ್ಟವರಿಗೆ) ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಅನುಕೂಲವಾಗುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಉಚಿತ ವಾಹನ ವ್ಯವಸ್ಥೆ ಕಲಿಸಲಾಗಿದ್ದು, ಈ ಬಗ್ಗೆ ವಾಹನ ಸೌಲಭ್ಯ ಪಡೆಯಲು ಮೊಬೈಲ್ ಸಂಖ್ಯೆ: ೯೪೪೯೬೧೫೭೪೩ ಮತ್ತು ೯೯೦೨೪೬೦೦೫೨ ಅನ್ನು ಸಂಪರ್ಕಿಸಿ, ಸದ್ರಿ ವಾಹನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಉಡುಪಿ ನಗರಸಭೆ: ಚುನಾವಣೆ ಹಿನ್ನೆಲೆ ಕಸ ಸಂಗ್ರಹಣೆ ಇಲ್ಲ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯು ಏಪ್ರಿಲ್ ೨೬ ರಂದು ನಡೆಯಲಿರುವ ಹಿನ್ನೆಲೆ, ಅಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಯಾವುದೇ ಕಸ ಸಂಗ್ರಹಣೆಗಳು ಇರುವುದಿಲ್ಲ. ಸದರಿ ದಿನದಂದು ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.


Ads on article

Advertise in articles 1

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ

Advertise under the article

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ