![NEWS: ಕಿಡ್ನಾಪ್ ಮಾಡುವ ಶೈಲಿಯಲ್ಲಿ ಕಾರು ಚಲಾಯಿಸಿದ ಚಾಲಕ.. ನಡೆದದ್ದೇನು? NEWS: ಕಿಡ್ನಾಪ್ ಮಾಡುವ ಶೈಲಿಯಲ್ಲಿ ಕಾರು ಚಲಾಯಿಸಿದ ಚಾಲಕ.. ನಡೆದದ್ದೇನು?](https://blogger.googleusercontent.com/img/b/R29vZ2xl/AVvXsEhfkzqRowx7JQOikWOfGuPipXAt3eavJY2ROLCn-N0-YN53oNum1bFxlMhvD1IBzapxizXfnKdDNyfvRyiMXA1NkJDMd-5Nl5n8tJDeDnn1RzcoRghyHmC0aS_Rq17Y3YaC-Gs_ADjTFDqU33HqCOsbh4OH9aQQ5SziWQW__2nFhgfDwBBebJBDDRxF/s320/IMG-20220522-WA0032.jpg)
NEWS: ಕಿಡ್ನಾಪ್ ಮಾಡುವ ಶೈಲಿಯಲ್ಲಿ ಕಾರು ಚಲಾಯಿಸಿದ ಚಾಲಕ.. ನಡೆದದ್ದೇನು?
ತಿರುವಿನ ರಸ್ತೆಗಳಲ್ಲಿ ಮಹಿಳೆಯರನ್ನು ಕರೆದುಕೊಂಡು ಹೋಗುವ ಸಂದರ್ಭ ಕಾರು ಚಾಲಕ ನಡೆಸಿದ ಆಟಾಟೋಪವೊಂದು ಆತಂಕ ಸೃಷ್ಟಿಸಿದ ನಂತರ ಕಾರನ್ನು ಅಡ್ಡಹಾಕಿ ಚಾಲಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಸಮೀಪ ಭಾನುವಾರ ನಡೆದಿದೆ. ಮಂಗಳೂರು ತೊಕ್ಕೊಟ್ಟು ಸಮೀಪ ಪಿಲಾರಿನ ಮಹಿಳೆಯರಿಬ್ಬರು ಕಾರಿನಲ್ಲಿದ್ದರು. ಕಾರು ಸಹಿತ ಚಾಲಕನನ್ನು ಪೊಲೀಸರ ವಶಕ್ಕೊಪ್ಪಿಸಲಾಯಿತು.
ತೊಕ್ಕೊಟ್ಟು ಸಮೀಪದ ಪಿಲಾರಿನ ಮಹಿಳೆಯರಿಬ್ಬರು ಪಣೋಲಿಬೈಲು ಕ್ಷೇತ್ರಕ್ಕೆ ಹೋಗಲು ಮಂಗಳೂರಿನಿಂದ ಬಾಡಿಗೆ ಕಾರಿನಲ್ಲಿ ಹೊರಟಿದ್ದರು. ಆದರೆ ನಿಗದಿತ ಸ್ಥಳಕ್ಕೆ ತಲುಪಬೇಕಾಗಿದ್ದ ಕಾರು ಚಾಲಕ ಬದಲಿ ರಸ್ತೆಗಳ ಮೂಲಕ ವೇಗದಲ್ಲಿ ಒಟ್ಟಾರೆಯಾಗಿ ಚಲಾಯಿಸಿದ್ದಾನೆ.
ಮೊದಲೇ ತಿರುವುಮುರುವು ರಸ್ತೆ, ಅದರಲ್ಲೂ ವೇಗವಾಗಿ ಹೋಗುವ ಕಾರನ್ನು ನೋಡಿ ಮಹಿಳೆಯರಿಬ್ಬರೂ ಭೀತರಾಗಿ ಚಾಲಕನ ಬಳಿ ವೇಗ ತಗ್ಗಿಸುವಂತೆ ಕೇಳಿದಾಗ ಚಾಲಕ ಕ್ಯಾರ್ ಮಾಡಿಲ್ಲ ಎನ್ನಲಾಗಿದೆ.ಮುಡಿಪು-ಬಾಕ್ರಬೈಲು ರಸ್ತೆಯಲ್ಲಿ ಸಂಚರಿಸುತ್ತಿದ್ದಂತೆ ಚಾಲಕನ ವರ್ತನೆಯಿಂದ ಬೆದರಿ ಕಂಗಾಲಾದ ಮಹಿಳೆಯರು ತಲೆ ಹೊರಗಡೆ ಹಾಕಿ ಕಾರು ನಿಲ್ಲಿಸುವಂತೆ ಬೊಬ್ಬೆ ಹೊಡೆದಿದ್ದಾರೆ.
ಇದನ್ನು ನೋಡಿದ ಸಾರ್ವಜನಿಕರು ಸಾಲೆತ್ತೂರು, ಕುಡ್ತಮುಗೇರು ಕಡೆಗಳಿಗೆ ಮೊಬೈಲ್ ಕರೆ ಮಾಡಿ ಮಹಿಳೆಯ ಅಪಹರಣವಾಗಿದೆ, ಕಾರನ್ನು ತಡೆಯುವಂತೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸುದ್ದಿ ತಿಳಿದ ಹಲವಾರು ಮಂದಿ ತಮ್ಮ ವಾಹನಗಳನ್ನು ರಸ್ತೆಗೆ ಅಡ್ಡವಾಗಿಟ್ಟು ಸಾಲೆತ್ತೂರು ಸಮೀಪದ ಕಾಡುಮಠದಲ್ಲಿ ಕಾರು ತಡೆಯುವಲ್ಲಿ ಯಶಸ್ವಿಯಾದರು.
ಈ ಸಂದರ್ಭ ಜನ ಜಮಾಯಿಸಿ ಕಾರನ್ನು ಸುತ್ತುವರಿದು ಮಹಿಳೆಯರನ್ನು ರಕ್ಷಿಸಿ, ವಿಚಾರಿಸಿದಾಗ ವಿಚಾರ ಗೊತ್ತಾಗಿದೆ. ಸುದ್ದಿ ತಿಳಿದು ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ, ಮಹಿಳೆಯರ ಬಳಿ ಮಾಹಿತಿ ಪಡೆದರು.