![POLITICS: 'ಮರಳಿ ಯತ್ನವ ಮಾಡು' - ತೃತೀಯ ರಂಗ ಪುನರ್ರಚನೆಗೆ ದೇವೇಗೌಡ, ಚಂದ್ರಶೇಖರ ರಾವ್ ಕಸರತ್ತು POLITICS: 'ಮರಳಿ ಯತ್ನವ ಮಾಡು' - ತೃತೀಯ ರಂಗ ಪುನರ್ರಚನೆಗೆ ದೇವೇಗೌಡ, ಚಂದ್ರಶೇಖರ ರಾವ್ ಕಸರತ್ತು](https://blogger.googleusercontent.com/img/b/R29vZ2xl/AVvXsEjMHIYgzUvHusN3Vszlm3ubyYj7iE28eaBDjf_5DmRXBIyfo3Giqcu_TMqCOmA-rnyBMayJSPm2OJ04CTJmTsYk2OShQ1qBcSvhmtYSi0pdAHXxYsCr0_QxiSkjShkSSfg-ZdXp9DkirwHjH83JzK67I4j52d-z_1X-1bJu_FOIjHj3kC6yKUfNXl6H/w640-h298/Politics.jpg)
POLITICS: 'ಮರಳಿ ಯತ್ನವ ಮಾಡು' - ತೃತೀಯ ರಂಗ ಪುನರ್ರಚನೆಗೆ ದೇವೇಗೌಡ, ಚಂದ್ರಶೇಖರ ರಾವ್ ಕಸರತ್ತು
ಬೆಂಗಳೂರು: ಅತ್ತ ನರೇಂದ್ರ ಮೋದಿ ತನ್ನ ಅಧಿಕಾರವಧಿಯ ಎಂಟು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದರೆ, ಇತ್ತ ಪ್ರತಿಪಕ್ಷಗಳಾದ ಕಾಂಗ್ರೆಸ್ ನ ಹಿರಿಯ ನಾಯಕರು ಹಾಲಿ ವರಿಷ್ಠರ ಜೊತೆ ಮುನಿಸಿಕೊಂಡು ಪಕ್ಷತ್ಯಾಗ ಮಾಡುವ ಸರಣಿ ಮುಂದುವರಿದಿದೆ. ಇದೇ ವೇಳೆ ತೃತೀಯ ರಂಗ ಕಟ್ಟುವ ಕನಸನ್ನು ಸ್ಥಳೀಯ ಪಕ್ಷಗಳು ಕೈಬಿಟ್ಟಿಲ್ಲ.
ಅದರ ಒಂದು ಭಾಗವಾಗಿ ಬೆಂಗಳೂರು ಪದ್ಮನಾಭನಗರದಲ್ಲಿರುವ ಜೆಡಿಎಸ್ ಮುಖಂಡ ಮಾಜಿ ಪ್ರಧಾನಿ ದೇವೇಗೌಡ ಅವರ ಮನೆಗೆ ತೆಲಂಗಾಣದ ಮುಖಂಡ, ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಭೇಟಿ ನೀಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಯುವಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿದ್ದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಸಿಆರ್, ಪರ್ಯಾಯ ರಾಜಕೀಯ ಶಕ್ತಿಯ ಕುರಿತು ವಿವರಿಸಿ ದೇಶದಲ್ಲಿ ಅತೀ ಶೀಘ್ರದಲ್ಲೇ ಬದಲಾವಣೆಯಾಗಲಿದೆ ಹಾಗೂ ದೇಶವೂ ಬದಲಾಗಲಿದೆ. ಎರಡು-ಮೂರು ತಿಂಗಳು ಕಾಯಿರಿ ಎಂದರು. ಭಾರತ ಬದಲಿಸುವ ಕೆಲಸ ನಮ್ಮಿಂದ ಆಗಲಿದೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ನಡೆಸುತ್ತಿದ್ದೇವೆ ಎಂದರು
ದೇಶಕ್ಕೆ ಪರ್ಯಾಯ ರಾಜಕೀಯ ವ್ಯವಸ್ಥೆ ಅನಿವಾರ್ಯವಾಗಿದೆ. ಮೂರನೇ ಶಕ್ತಿ ಇಂದು ಅತ್ಯಗತ್ಯವಾಗಿದ್ದು, ಎರಡ್ಮೂರು ತಿಂಗಳಲ್ಲಿ ಸ್ಪಷ್ಟತೆ ಸಿಗಲಿದೆ. ಒಂದು ಉತ್ತಮ ನಿರ್ಧಾರ ಹೊರಬೀಳಲಿದೆ ಎಂದು ಇದೇವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.